ವಿಭಾಗಾಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯಗಳು:
ಕಂದಾಯ ಆಡಳಿತದ ಮುಖ್ಯಸ್ಥರಾದ ವಿಭಾಗಾಧಿಕಾರಿಗಳು ಜಿಲ್ಲೆಯ ಕಂದಾಯ ಮತ್ತು ವಿಭಾಗದ ಇತರ ಅನೇಕ ಇಲಾಖೆಗಳ ಕಾರ್ಯಗಳ ಸಾಮಾನ್ಯ ಅಡಳಿತದಲ್ಲಿ ಪ್ರಮುಖವಾದ ಪಾತ್ರನಿರ್ವಹಿಸಿದ್ದರು.
1. ರಾಜ್ಯ ಸರ್ಕಾರ ಮತ್ತು ಜಿಲ್ಲಾ ಪ್ರಾಧಿಕಾರಗಳ ನಡುವಿನ ಕೊಂಡಿಯಾಗಿ ವಿಭಾಗಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು.
2. ಅವರು ವಿಭಾಗದ ಮುಖ್ಯಕಂದಾಯ ಅಧಿಕಾರಿಯಾಗಿದ್ದರು.
3. ಅವರು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳ ಸಮಗ್ರ ಮೇಲ್ವಿಚಾರಣೆ ಮಾಡುತ್ತಿದ್ದರು.
4. ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಕಂದಾಯ ವಿಷಯಗಳ, ಅಭಿವೃದ್ಧಿ ಕಾರ್ಯಕ್ರಮಗಳ, ಪೌರಾಡಳಿತದ, ಇತ್ಯಾದಿ ಎಲ್ಲ ಪ್ರಸ್ತಾವನೆಗಳನ್ನು ವಿಭಾಗಾಧಿಕಾರಿಗಳ ಮುಖಾಂತರ ಸಲ್ಲಿಸುವ ಕುರಿತಂತೆ ಅವರು ಪ್ರಮುಖ ಸೇತುವೆಯಾಗಿದ್ದರು.
5. ವಿಭಾಗದ ಆಡಳಿತದ ಮುಖ್ಯಸ್ಥರಾಗಿ ಅಧೀನ ಕಚೇರಿಗಳಿಗೆ ಬಜೆಟ್ ಅನುದಾನವನ್ನು ಹಂಚುವ ಮತ್ತು ಪುನರ್ ವಿನಿಯೋಗ ಮಾಡುವ ಜವಾಬ್ದಾರಿ ಹೊಂದಿದ್ದರು.
6. ಕಂದಾಯ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಿಗೆ ಕಾಯ್ದೆಗಳ ಮತ್ತು ಕಂದಾಯ ಸಿಬ್ಬಂದಿಗಳ ಶಿಸ್ತು ನಡವಳಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮೇಲೆ ವಿಭಾಗಾಧಿಕಾರಿಗಳು ಮೇಲ್ಮನವಿ ಪ್ರಾಧಿಕಾರವಾಗಿದ್ದರು.
7. ಹಕ್ಕು ದಾಖಲಾತಿ ನಿರ್ವಹಣೆ, ಭೂ ಕಂದಾಯ ವಸೂಲಿ ಮತ್ತು ಎಲ್ಲ ತರಹದ ಸರ್ಕಾರಿ ಬಾಕಿಗಳ ವಸೂಲಿ, ಜಮಾಬಂದಿ ನಡೆಸುವುದು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಸಂಸತ್, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಪ್ರಾಧಿಕಾರದ ಚುನಾವಣೆಗಳಿಗೆ ಸಂಬಂಧಿಸಿದ ಮೇಲ್ವಿಚಾರಣೆ, ಜನಗಣತಿ ನಡೆಸುವುದು ಇತ್ಯಾದಿಗಳು ಪ್ರಮುಖ ಕರ್ತವ್ಯಗಳಾಗಿದ್ದವು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವಿಭಾಗಾಧಿಕಾರಿಯ ಕರ್ತವ್ಯಗಳು, ಮೇಲ್ವಿಚಾರಕ, ನಿಯಂತ್ರಣ, ಸಮನ್ವಯ ಮತ್ತು ಮೇಲ್ಮನವಿಗೆ ಸಂಬಂಧಿಸಿದ್ದಾಗಿದ್ದವು.
ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ.
ವಿಭಾಗಾಧಿಕಾರಿಗಳ ಹುದ್ದೆ ರದ್ದಾದ ನಂತರ ಸರ್ಕಾರದ ಆದೇಶ ಕ್ರ: ಆರ್ಡಿ/09/ಬಿಎಂಎಂ/2003 ದಿನಾಂಕ:8-9-2015 ರನ್ವಯ ಆ ಹುದ್ದೆಯನ್ನು ಪ್ರಾದೇಶಿಕ ಆಯುಕ್ತರೆಂದು ಪುನ: ಸೃಜಿಸಲಾಯಿತು. ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಚೇರಿಯ ದಿನಾಂಕ:14-11-2005 ರಿಂದ ಕಾರ್ಯನಿರ್ವಹಿಸುತ್ತಿದೆ.
ಪ್ರಾದೇಶಿಕ ಆಯುಕ್ತರ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿದ್ದರೂ ಅದು ಹಿಂದಿನ ವಿಭಾಗಾಧಿಕಾರಿ ಹುದ್ದೆಯಂತೆಯೇ ಇರುತ್ತದೆ.
ಸರ್ಕಾರದ ಆದೇಶ ದಿನಾಂಕ:08-9-2005 ರನ್ವಯ, ಪ್ರಾದೇಶಿಕ ಆಯುಕ್ತರ ಅಧಿಕಾರ ಮತ್ತು ಕರ್ತವ್ಯಗಳು ಈ ಕೆಳಗಿನಂತಿವೆ:-
•ಕಂದಾಯ ಇಲಾಖೆಯ ಸಿಬ್ಬಂದಿ, ಅಭಿವೃದ್ಧಿ, ತರಬೇತಿ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ
•ಜಿಲ್ಲೆ, ಉಪವಿಭಾಗ, ತಾಲ್ಲೂಕು, ಹೋಬಳಿ ಮತ್ತು ಗ್ರಾಮ ಮಟ್ಟದ ಕಂದಾಯ ಲೆಕ್ಕಪತ್ರಗಳು, ತಪಾಸಣೆಗೊಂಡ ಲೆಕ್ಕಪತ್ರಗಳ ನಿರ್ವಹಣೆ, ವಾರ್ಷಿಕ ತಪಾಸಣೆ, ಅನಿರೀಕ್ಷಿತ ತಪಾಸಣೆಗಳು ಮತ್ತು ವಾರ್ಷಿಕ ಜಮಾಬಂದಿ.
•ಈ ಹಿಂದಿನ ವಿಭಾಗಾಧಿಕಾರಿಗಳು ನಿರ್ವಹಿಸುತ್ತಿದ್ದ ವಿವಿಧ ನಿಯಮಗಳು ಮತ್ತು ಉಪನಿಯಮಗಳಡಿಯಲ್ಲಿನ ಅಧಿಕಾರಗಳು (ಮೇಲ್ಮನವಿ ಮತ್ತು ರಿವಿಜನ್)
•ಮುದ್ರಾಂಕ ಮತ್ತು ನೋಂದಣಿ ಫೀ, ಜಮೀನಿನ ಮೋಜಣಿ ಮತ್ತು ಭೂದಾಖಲೆಗಳು, ಮುಜರಾಯಿ ಕಚೇರಿಯ ಆಡಳಿತಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ
•ತಪಾಸಣಾ ಅಧಿಕಾರಿ - ಸರ್ಕಾರದ ಆದೇಶಗಳು ಮತ್ತು ನಿರ್ದೇಶನಗಳನ್ವಯ ಮತ್ತು ಕಾಯ್ದೆಗಳನ್ವಯ ಅಧೀನ ಕಾರ್ಯಾಲಯಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ತಪಾಸಣೆ ನಡೆಸುವುದು.
•ಪ್ರಕೃತಿ ವಿಕೋಪ ಮತ್ತು ಬರಪರಿಹಾರ ಕಾಮಗಾರಿಗಳು ಮತ್ತು ಬೆಳೆ ಕಟಾವು, ಪ್ರಾತ್ಯಷಿಕೆ ಮತ್ತು ಭೂಕಂದಾಯ ಮನ್ನಾ ಕುರಿತ ವಿಷಯಗಳ ಮೇಲ್ವಿಚಾರಣೆ.
•ವಿಭಾಗದಲ್ಲಿನ ಎಲ್ಲ ವಿವಿಧ ಚುನಾವಣೆಗಳ ಮೇಲ್ವಿಚಾರಣೆ
•ಜಮೀನು ಮಂಜೂರಾತಿ, ಭೂಸ್ವಾಧೀನ, ಭೂ ಅಭಿವೃದ್ಧಿ, ಭೂ ಕಂದಾಯ ವಸೂಲಿ, ಜಮೀನುಗಳ ಮೋಜಣಿ, ಕಂದಾಯ ಇಲಾಖೆಯ ಗಣಕೀಕರಣ ಇತ್ಯಾದಿ ವಿಷಯಗಳ ಮೇಲ್ವಿಚಾರಣೆ
•ಜಿಲ್ಲಾ, ಉಪವಿಭಾಗ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳಿಗೆ ಅನುದಾನ ಹಂಚಿಕೆ, ವಾರ್ಷಿಕ ಆಯವ್ಯಯ ತಯಾರಿಕೆ, ವಿಧಾನಸಭೆ/ವಿಧಾನ ಪರಿಷತ್ತಿನ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು ತಯಾರಿಸುವುದು ಮತ್ತು ಸಂಬಂಧಿಸಿದ ಉಪಸಮಿತಿಗಳಿಗೆ ಸಲ್ಲಿಸುವುದು ಮತ್ತು ಕಂದಾಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ತಪಾಸಣೆ ಮಾಡುವುದು.
•ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಕಚೇರಿಗಳ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಸಮೀಕ್ಷೆಯನ್ನು ಕನಿಷ್ಟ ತಿಂಗಳಿಗೊಮ್ಮೆ ಮಾಡುವುದು.
•ಆರ್ಥಿಕ ಮತ್ತು ಭೌತಿಕ ಗುರಿಗಳ ಕುರಿತು ಪ್ರಗತಿ ಸಾಧಿಸದೇ ಇದ್ದಲ್ಲಿ, ಆ ಕುರಿತು ಕ್ರಮ ಜರುಗಿಸುವುದು ಮತ್ತು ಅದರ ಬಗ್ಗೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು, ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸುವುದು ಮತ್ತು ನಿಗದಿತ ಗುರಿ ಸಾಧಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು.
•ಇದರೊಂದಿಗೆ ಅಭಿವೃದ್ಧಿ ಇಲಾಖೆಗಳ ತಪಾಸಣೆ ಮತ್ತು ಅಗತ್ಯವೆನಿಸಿದಲ್ಲಿ ಸಮೀಕ್ಷೆ ಮಾಡುವುದು
ಅಭಿವೃದ್ಧಿ ಆಯುಕ್ತರು, ಉತ್ತರ ಕರ್ನಾಟಕ ಬೆಳಗಾವಿ ಈ ಹುದ್ದೆಯು ರದ್ದಾದ ನಂತರ ಸರ್ಕಾರದ ಅಧಿಸೂಚನೆ ಕ್ರ:ಎಸ್ಪಿಡಿ/70/ಎಚ್ಕೆಡಿಬಿ/2005 ದಿನಾಂಕ:09-12-2015 ರನ್ವಯ ಬೆಳಗಾವಿ ವಿಭಾಗದ 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಆಯುಕ್ತರಿಗೆ ನೀಡಿದ್ದ ಕರ್ತವ್ಯಗಳನ್ನು ಸಹ ಪ್ರಾದೇಶಿಕ ಆಯುಕ್ತರಿಗೆ ವಹಿಸಲಾಗಿದೆ.
ಈ ಮೇಲೆ ವಿವರಿಸಿದ ಆಡಳಿತಾತ್ಮಕ ಅಧಿಕಾರಗಳನ್ನು ಹೊರತುಪಡಿಸಿ ಸರ್ಕಾರವು ಒಟ್ಟು - ವಿವಿಧ ಕಾಯ್ದೆ / ನಿಯಮಗಳ ಅಡಿಯಲ್ಲಿ ಶಾಸನಬದ್ಧ ಅಧಿಕಾರಗಳನ್ನು ನೀಡಿದೆ.
ಸರ್ಕಾರದ ಅಧಿಸೂಚನೆ ಕ್ರ:ಆರ್ಡಿಪಿ-20-ಝಡ್ಪಿಎಸ್-2006 ದಿನಾಂಕ: 28-4-2007 ರನ್ವಯ ಜಿಲ್ಲಾ ಪಂಚಾಯತಿಗಳ ತಪಾಸಣೆ ಕೈಕೊಳ್ಳುವ ಅಧಿಕಾರವನ್ನು ನೀಡಿದೆ.
ಸರ್ಕಾರದ ಆದೇಶ ಕ್ರಮಾಂಕ: ಆರ್ಡಿ – 227-ಸಮಿತಿ -2007 ದಿ:05-12-2007 ರನ್ವಯ ಪ್ರಾದೇಶಿಕ ಆಯುಕ್ತರನ್ನು ಇಲಾಖೆಯ ಪ್ರಧಾನ ಮುಖ್ಯಸ್ಥರನ್ನಾಗಿ ನೇಮಿಸಿರುತ್ತಾರೆ.